ಬಂಟ್ವಾಳ: ಜಾರಿ ಬಿದ್ದು ಕಾಲು ಹಾಗು ಸೊಂಟಕ್ಕೆ ಗಾಯವಾಗಿರುವುದರಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ನಾಲ್ಕು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಶಾಸಕರ ಕ್ಷೇತ್ರದ ಪ್ರವಾಸವನ್ನು ರದ್ದು ಮಾಡಲಾಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.
ಪಾಕೃತಿಕ ವಿಕೋಪಕ್ಕೆ ತುತ್ತಾಗಿ ಹಾನಿಯಾದ ಪ್ರದೇಶಗಳಿಗೆ ಬಿಜೆಪಿ ವಿಪಕ್ಷ ನಾಯಕ ಆರ್.ಆಶೋಕ್ ಅವರು ಬಂಟ್ವಾಳಕ್ಕೆ ಆಗಮಿಸಿದ ದಿನದಂದು ಬೆಳಿಗ್ಗೆ ಶಾಸಕ ರಾಜೇಶ್ ನಾಯ್ಕ್ ಅವರು ಬಿದ್ದು ಕಾಲಿಗೆ ಹಾಗೂ ಸೊಂಟಕ್ಕೆ ಗಾಯವಾಗಿತ್ತು. ಅದೇ ದಿನ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಲಹೆಯಂತೆ ಕಾಲಿನ ಬೆರಳಿಗೆ ಹೊಲಿಗೆ ಹಾಕಲಾಗಿತ್ತು. ಬಿಜೆಪಿ ವತಿಯಿಂದ ನಡೆಯುವ ಪಾದಯಾತ್ರೆ ವಿಚಾರವಾಗಿ ಆಗಸ್ಟ್ 2ರಂದು ಬಿಜೆಪಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಶಾಸಕರಿಗೆ ಕಾಲಿನ ನೋವು ಉಲ್ಬಣಗೊಂಡಿದೆ. ಹಾಗಾಗಿ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಕಾಲಿನಲ್ಲಿ ಬಿರುಕು ಇರುವ ಬಗ್ಗೆ ವೈದ್ಯರು ತಿಳಿಸಿದಲ್ಲದೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡಿದ್ದರು. ವೈದ್ಯರ ಸಲಹೆಯ ಮೇರೆಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಎಕ್ಸರೇ ನಡೆಸಿದ ಮೂಳೆ ತಜ್ಞ ಡಾ. ಅಜಿತ್ ಕುಮಾರ್ ರೈ ಅವರು ಕಾಲಿನ ಬಿರಕು ಬಗ್ಗೆ ಮಾಹಿತಿ ನೀಡಿ, ಮುಂದಿನ ನಾಲ್ಕು ವಾರಗಳ ಕಾಲ ನಡೆದಾಡದೆ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಅನಾರೋಗ್ಯದ ಕಾರಣದಿಂದ ಮುಂದಿನ ನಾಲ್ಕು ವಾರಗಳ ಕಾಲ ಶಾಸಕರು ಸಾರ್ವಜನಿಕರ ಸಂಪರ್ಕಕ್ಕೆ ಸಿಗಲು ಕಷ್ಟಸಾಧ್ಯ ಎಂದು ಕಚೇರಿ ಮೂಲಗಳು ತಿಳಿಸಿವೆ. ಅಗತ್ಯವಿರುವ ಕೆಲಸಗಳಿಗೆ ಪೋನ್ ಮೂಲಕ ಸಂಪರ್ಕ ಮಾಡುವಂತೆ ಅಥವಾ ಶಾಸಕರ ಕಚೇರಿಯನ್ನು ಸಂಪರ್ಕ ಮಾಡಲು ಕೋರಿದ್ದಾರೆ.

Social Icons