ಸೌಜನ್ಯ ಕೊಲೆ ಪ್ರಕರಣ: ಮರು ತನಿಖೆ ಕೋರಿದ್ದ ಸಂತ್ರಸ್ತೆ ತಂದೆ ಅರ್ಜಿ ವಜಾ: ಸಿಬಿಐ ಮೇಲ್ಮನವಿ ಬಗ್ಗೆಯೂ ಆದೇಶ

ಸೌಜನ್ಯ ಕೊಲೆ ಪ್ರಕರಣ: ಮರು ತನಿಖೆ ಕೋರಿದ್ದ ಸಂತ್ರಸ್ತೆ ತಂದೆ ಅರ್ಜಿ ವಜಾ: ಸಿಬಿಐ ಮೇಲ್ಮನವಿ ಬಗ್ಗೆಯೂ ಆದೇಶ




ರಾಜ್ಯವ್ಯಾಪಿ ಭಾರೀ ಸದ್ದು ಮಾಡಿದ್ದ ಉಜಿರೆಯ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ಬಯಸಿದ್ದ ಅರ್ಜಿಗಳು ಮತ್ತು ಸಿಬಿಐ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.

ಕರ್ನಾಟಕ ಹೈಕೋರ್ಟ್‌ನ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾ. ಜೆ.ಎಂ. ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಸೌಜನ್ಯ ತಂದೆ, ಧರ್ಮಸ್ಥಳದ ಚಂದಪ್ಪ ಗೌಡ ಮತ್ತು ಖುಲಾಸೆಗೊಂಡಿರುವ ಕಾರ್ಕಳ ತಾಲೂಕಿನ ಕುಕ್ಕುಂದೂರಿನ ಸಂತೋಷ್ ರಾವ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ನ್ಯಾಯಪೀಠ ವಜಾಗೊಳಿಸಿದೆ. ಇದೇ ವೇಳೆ, ಸಿಬಿಐ ಪ್ರತ್ಯೇಕವಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನೂ ವಜಾ ಮಾಡಲಾಗಿದೆ.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿದ್ದ ಸಿಬಿಐ ವಿಶೇಷ ಮಕ್ಕಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ಕೊಲೆ ಮತ್ತು ಅತ್ಯಾಚಾರ ಆರೋಪದಡಿ ಸಂತೋಷ್ ರಾವ್ ಅವರನ್ನು ದೋಷಿ ಎಂದು ಆದೇಶಿಸಬೇಕು ಎಂದು ಮೇಲ್ಮನವಿಯಲ್ಲಿ ಕೋರಲಾಗಿತ್ತು.

ಇದೇ ವೇಳೆ, ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಸಂತೋಷ್ ರಾವ್ ಕೂಡ ಅರ್ಜಿ ಸಲ್ಲಿಸಿದ್ದು, ನೈಜ ಆರೋಪಿಗಳ ಪತ್ತೆಗೆ ಚೆನ್ನೈ ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ಕೋರಿಕೊಂಡಿದ್ದರು. ಇನ್ನೊಂದೆಡೆ, ಸೌಜನ್ಯ ತಂದೆ ಚಂದಪ್ಪ ಗೌಡ ಅವರೂ ನೈಜ ಆರೋಪಿಗಳ ಪತ್ತೆಗೆ ಪ್ರಕರಣವನ್ನು ಸಿಬಿಐ ಚೆನ್ನೈ ಘಟಕದಿಂದ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಮೂರು ಅರ್ಜಿಗಳು ಇದೀಗ ವಜಾಗೊಂಡಿವೆ.

ಸಿಬಿಐ ಪರ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕರ ವಾದವೇನು..?

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆದ 48 ತಾಸುಗಳಲ್ಲಿ ಆರೋಪಿ ಸಂತೋಷ್ ರಾವ್ ಅವರನ್ನು ಬಂಧಿಸಲಾಗಿದೆ. ಆತ ಸ್ಥಳೀಯನಲ್ಲ. ಕೊಲೆ ನಡೆದ ಸ್ಥಳದಲ್ಲಿ ಆತ ಏಕಿದ್ದ ಎಂಬುದಕ್ಕೆ ಆರೋಪಿ ಯಾವ ವಿವರಣೆಯನ್ನೂ ನೀಡಿಲ್ಲ. ಘಟನಾ ಸ್ಥಳದಲ್ಲಿ ಆತನದ್ದು ಎನ್ನಲಾದ ಬಿಳಿ ಪಂಚೆ ದೊರೆತಿದ್ದು, ಅದರಿಂದ ಸಂತೋಷ್ ರಾವ್‌ನ ಕೂದಲು ಸಂಗ್ರಹಿಸಲಾಗಿದೆ. ಡಿಎನ್‌ಎ ಪರೀಕ್ಷೆಯಲ್ಲಿ ಇದು ಆತನಿಗೆ ಸೇರಿದ್ದೇ ಎಂಬುದು ದೃಢಪಟ್ಟಿದೆ.

ಸಂತೋಷ್ ರಾವ್ ಬೆನ್ನಿನಲ್ಲಿ ಉಗುರಿನಿಂದ ಪರಚಿದ ಗಾಯವಾಗಿದೆ. ಈ ಗಾಯ ಎಲ್ಲಿ ಆಯಿತು ಎಂಬುದನ್ನು ಆರೋಪಿ ಸಂತೋಷ್ ವಿವರಣೆ ನೀಡಿಲ್ಲ. ಮೇಲಾಗಿ, ಆತನ ಮಂಡಿಯಲ್ಲಿ ಗಾಯವಾಗಿತ್ತು. ಇವೆಲ್ಲವೂ ಪ್ರಕರಣದಲ್ಲಿ ಪ್ರಮುಖ ವೈದ್ಯಕೀಯ ದಾಖಲೆಗಳಾಗಿವೆ. ಇವೆಲ್ಲವೂ ನೋಡಿದರೆ, ಆತನೇ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾನೆ ಎಂಬುದು ಸಿಬಿಐ ಪರ ವಾದವಾಗಿತ್ತು.

ಪ್ರಕರಣದಲ್ಲಿ ಸೌಜನ್ಯ ಗುಪ್ತಾಂಗದಲ್ಲಿ ದೊರೆತ ಸ್ವಾಬ್ ಬಹುಮುಖ್ಯವಾಗಿತ್ತು. ಗೋಲ್ಡನ್ ಹವರ್‌ ಅಂದರೆ ಕೃತ್ಯ ನಡೆದ ಅಮೂಲ್ಯ ಸಮಯದಲ್ಲಿ ಈ ಸ್ವಾಬ್‌ನ್ನು ಸಂಗ್ರಹಿಸಲು ದಕ್ಷಿಣ ಕನ್ನಡ ಪೊಲೀಸರು ವಿಫಲವಾಗಿದ್ಧಾರೆ. ಅದನ್ನು ಮತ್ತೆ ಸಂಗ್ರಹಿಸುವ ಸಾಧ್ಯತೆ ಇಲ್ಲ. ಗೋಲ್ಡನ್ ಹವರ್‌ನಲ್ಲಿ ಸ್ಥಳ ಮಹಜರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಶೋಧ ಮಾಡಿಸಬೇಕು ಎಂಬುದನ್ನು ವಿಚಾರಣಾ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿತ್ತು.