ಐವರ ಜೊತೆ ಮದುವೆ, 49 ಹುಡ್ಗೀರ ಜೊತೆ ಮುಹೂರ್ತ ಫಿಕ್ಸ್..!!| ಪೊಲೀಸರನ್ನು ದಂಗುಬಡಿಸಿದ ಈ ಸ್ಟೋರಿ ಓದಿ

ಭುವನೇಶ್ವರ: ಎರಡು ಮೂರು ಮದುವೆಯಾಗಿ ವಂಚಿಸುವುದು, ಮದುವೆಯಾಗುತ್ತೇನೆಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೊನೆಗೆ ವಂಚಿಸುವುದು ಇತ್ಯಾದಿ ಪ್ರಕರಣಗಳನ್ನು ನಾವು ಬಹಳಷ್ಟು ನೋಡಿದ್ದೇವೆ. ಆದರೆ ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರೇ ದಂಡುಬಡಿದು ಹೋಗಿದ್ದಾರೆ. ಯಾಕೆಂದರೆ ಈತ ಆಗಿದ್ದು ಒಂದಲ್ಲ, ಎರಡಲ್ಲ, ಐದು ಮದುವೆ. ಕೈಯಲ್ಲಿ ನೆಟ್ಟಗೆ ಒಂದೂ ಕೆಲಸವಿಲ್ಲ. ಆದರೆ  ಕಾರು, ದುಬೈ ಪ್ರವಾಸ ಮಾಮೂಲಿಯಾಗಿಸಿಕೊಂಡಿದ್ದ 36 ವರ್ಷದ ಸತ್ಯಜಿತ್ ಮನಗೋವಿಂದ್ ಸಮಾಲ್ ಎಂಬಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ.



ಈತ ಅಂತಿಂತ ಕಿಲಾಡಿಯಲ್ಲ. ಮ್ಯಾಟ್ರಿಮೋನಿ ಸೇರಿದಂತೆ ಹಲವು ಸೈಟ್‌ಗಳಲ್ಲಿ ಹುಡುಕಾಡಿ ಯವತಿಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಬಳಿಕ ಮದುವೆ. ಆದರೆ ಮದುವೆಯಾದ ಬೆನ್ನಲ್ಲೇ ಆಕೆಯ ಖಾತೆಯಲ್ಲಿರುವ ಹಣ, ಪೋಷಕರ ಹಣ ಎಲ್ಲವನ್ನೂ ದೋಚಿ ದುಬೈ ಪ್ರವಾಸ ಮಾಡುತ್ತಿದ್ದ. ಹೀಗೆ ಐವರಿಗೆ ಮೋಸ ಮಾಡಿದ ಭುವನೇಶ್ವರ ಸತ್ಯಜಿತ್ ಮನಗೋವಿಂದ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಮ್ಯಾಟ್ರಿಮೋನಿ ಮೂಲಕ ಶ್ರೀಮಂತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಸತ್ಜಜಿತ್, ಮೊದಲ ಪತ್ನಿಯಿಂದ ಬರೋಬ್ಬರಿ 36 ಲಕ್ಷ ರೂಪಾಯಿ ಹಾಗೂ ಐಷಾರಾಮಿ ಕಾರೊಂದನ್ನು ಪಡೆದು ವಂಚಿಸಿದ್ದ. ಎರಡನೇ ಪತ್ನಿಯಿಂದ 8 ಲಕ್ಷ ರೂಪಾಯಿ ಹಾಗೂ ರಾಯಲ್ ಎನ್‌ಫೀಲ್ಡ್ ಬುಲೆಟ್ ಪಡೆದು ಮೋಸ ಮಾಡಿದ್ದ. ಇನ್ನು ಮೂರು, ನಾಲ್ಕು ಹಾಗೂ ಐದನೇ ಪತ್ನಿಯರಿಗೂ ಇದೇ ಗತಿ.

 ಸತ್ಯಜಿತ್ ಮೋಸದ ಮದುವೆ ಕುರಿತು ಇಬ್ಬರು ಪತ್ನಿಯರು ದೂರು ನೀಡಿದ್ದರು. ಇದರ ಪರಿಣಾಮ ಹುಡುಕಾಟ ಶುರುವಾಗಿತ್ತು. ಮತ್ತೊಂದು ಮದುವೆ ತಯಾರಿಯಲ್ಲಿದ್ದ ಸತ್ಯಜಿತ್‌ನ ಒಡಿಶಾ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ಮ್ಯಾಟ್ರಿಮೋನಿ ಮೂಲಕ 49 ಹುಡುಗಿಯರ ಜೊತೆ ಈತ ಚಾಟಿಂಗ್ ನಡೆಸುತ್ತಿದ್ದ. ಎಲ್ಲರಿಗೂ ಮದುವೆ ಭರವಸೆ ನೀಡಿದ್ದ ಅನ್ನೋ ಮಾಹಿತಿ ಬಯಲಾಗಿದೆ.ಯುವತಿಯರ ಜೊತೆ ಚಾಟಿಂಗ್ ನಡೆಸುತ್ತಾ ಈತ ವಿಶ್ವಾಸ ಗಳಿಸುತ್ತಿದ್ದ. ಬಳಿಕ ಹಣದ ಬೇಡಿಕೆ, ಭಾವನಾತ್ಮಕವಾಗಿ ಬೇಡಿಕೆ ಮೂಲಕ ವಂಚಿಸುತ್ತಿದ್ದ.  ಅನಿವಾರ್ಯವಾದರೇ ಮಾತ್ರ ಮದುವೆಯಾಗುತ್ತಿದ್ದ. ಮದುವೆಯಾಗುತ್ತೇನೆ ಎಂದು ಹಣ ಪಡೆದು ಹಲವರನ್ನು ಈತ ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮದುವೆ ಭರವಸೆ ಮೂಲಕ ಪಡೆದ ಲಕ್ಷ ಲಕ್ಷ ರೂಪಾಯಿ ಹಣದಲ್ಲಿ ದುಬೈ ಪ್ರವಾಸ ಮಾಡುತ್ತಿದ್ದ. ಒಂದೊಂದು ತಿಂಗಳು ದುಬೈನಲ್ಲಿ ತಂಗುತ್ತಿದ್ದ. ಅಕೌಂಟ್ ಖಾಲಿಯಾಗುತ್ತಿದ್ದಂತೆ ಮರಳಿ ಮತ್ತೊಬ್ಬರನ್ನು ವಂಚಿಸುತ್ತಿದ್ದ. ಸತ್ಯಜಿತ್ ಬಂಧಿಸಿದ ಪೊಲೀಸರು ಈತನಿಂದ 2 ಲಕ್ಷ ರೂಪಾಯಿ ನಗದು ಹಣ  ವಶಪಡಿಸಲಾಗಿದೆ. ಇನ್ನು ಖಾತೆಯಲ್ಲಿದ್ದ ಒಂದು ಲಕ್ಷ ರೂಪಾಯಿ ಫ್ರೀಝ್ ಮಾಡಲಾಗಿದೆ. ಜೊತೆಗೆ ಬುಲೆಟ್ ಸೇರಿದಂತೆ ಇತರ ಕೆಲ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಇನ್ನಷ್ಟು ಯುವತಿಯರು ವಂಚನೆಗೆ ಒಳಗಾಗುವುದು ತಪ್ಪಿದಂತಾಗಿದೆ.