ರಸ್ತೆ ಸಂಪರ್ಕ ಕಡಿತ ಹಿನ್ನೆಲೆ| ಬೆಂಗಳೂರು-ಮಂಗಳೂರು ಹೆಚ್ಚುವರಿ ರೈಲು ಸಂಚಾರ!| Time Table ಹೀಗಿದೆ ನೋಡಿ

ಮಂಗಳೂರು: ಎಲ್ಲೆಡೆ ವರುಣಾರ್ಭಟ ಮುಂದುವರೆದಿದೆ. ಶಿರಾಡಿ ‍ಘಾಟ್, ಮಡಿಕೇರಿ ಮೂಲಕ ಬೆಂಗಳೂರಿಗೆ ರಸ್ತೆ ಸಂಪರ್ಕ ದುಸ್ತರರಗೊಂಡಿದೆ. ಇರುವ ಚಾರ್ಮಾಡಿ ಘಾಟ್ ನಲ್ಲಿ ಕೂಡ ಯಾವಾಗ ಭೂಕುಸಿತ ಸಂಭವಿಸಿ ರಸ್ತೆ ಸಂಪರ್ಕ ಕಡಿತಗೊಳ್ಳುವುದೋ ಹೇಳಲು ಸಾಧ್ಯವಿಲ್ಲ. ಹೀಗಾಗಿ ಮಂಗಳೂರು-ಉಡುಪಿ ಭಾಗಗಳಿಗೆ ಬೆಂಗಳೂರಿನಿಂದ ಸಂಪರ್ಕ ಕಡಿತಗೊಂಡಿದೆ. ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತ ಹಿನ್ನೆಲೆ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಬರೆದ ಪತ್ರಕ್ಕೆ ರೈಲ್ವೇ ಇಲಾಖೆ ಸ್ಪಂದನೆ ನೀಡಿದೆ. ಬೆಂಗಳೂರು-ಮಂಗಳೂರು ಮಧ್ಯೆ ಹೆಚ್ಚುವರಿ ರೈಲು ಓಡಿಸಲು ರೈಲ್ವೇ ಇಲಾಖೆ ಒಪ್ಪಿಕೊಂಡಿದೆ.



ಸದ್ಯ ಏಕೈಕ ತೆರೆದಿರುವ ಚಾರ್ಮಾಡಿ ಹೆದ್ದಾರಿಯಲ್ಲಿಯೂ ಭಾರೀ ಟ್ರಾಫಿಕ್ ಜಾಂ ಇದೆ. ಈ ಹಿನ್ನೆಲೆ, ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟರು ರೈಲ್ವೇ ಇಲಾಖೆಗೆ ಮಂಗಳೂರು-ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಪತ್ರ ಬರೆದಿದ್ದಾರೆ. ಸಂಸದರ ಪತ್ರಕ್ಕೆ ತುರ್ತಾಗಿ ಕೆಲವೇ ಗಂಟೆಗಳಲ್ಲಿ ಸ್ಪಂದಿಸಿದ ರೈಲ್ವೆ ಇಲಾಖೆಯು ನಾಲ್ಕು ದಿನಗಳ ಕಾಲ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಹಾಗೂ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲನ್ನು ನೀಡಿ ಆದೇಶ ನೀಡಿದೆ.

ಸದ್ಯದ ವೇಳಾಪಟ್ಟಿಯ ಪ್ರಕಾರ ವಿಶೇಷ ರೈಲುಗಳ ವಿವರ ಹೀಗಿದೆ.

ಜು. 19ರಂದು ರೈಲು ಸಂಖ್ಯೆ 06547 ಎಸ್‌ಬಿಸಿ ಬೆಂಗಳೂರಿನಿಂದ ಹೊರಡಲಿದೆ.

ಜು.20ರಂದು ರೈಲು ಸಂಖ್ಯೆ 06548 ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳಲಿದೆ. 

ಜು.21 ಹಾಗೂ 22ರಂದು ರೈಲು ಸಂಖ್ಯೆ 06549 ಯಶವಂತಪುರದಿಂದ ಮಂಗಳೂರು ಜಂಕ್ಷನ್‌ಗೆ ಬರಲಿದೆ. 

ಜು.21 ಹಾಗೂ 22 ರಂದು ರೈಲು ಸಂಖ್ಯೆ 06550 ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳಲಿದೆ.

ಇನ್ನು ಹೆಚ್ಚುವರಿ ರೈಲು ಬಿಟ್ಟರೂ ಕರಾವಳಿಗೆ ರೈಲು ಸಂಚಾರ ಸುಲಭವಲ್ಲ. ಸಕಲೇಶಪುರದಿಂದ ಹೊರಟು ಕುಕ್ಕೆಸುಬ್ರಹ್ಮಣ್ಯ ದಾಟಬೇಕಾದರೆ ಅದು ಜೀವ ಕೈನಲ್ಲಿ ಹಿಡಿದೇ ಸಾಗಬೇಕು ಏಕೆಂದರೆ ಗುಂಡ್ಯ ಬಳಿ ಮಳೆ ಅವಾಂತರದಿಂದ ಗುಡ್ಡ ಕುಸಿಯವುದು ಸಾಮಾನ್ಯವಾಗಿದೆ. ಒಂದು ವೇಳೆ ರೈಲು ಹಳಿಯ ಮೇಲೆ ಗುಡ್ಡ ಕುಸಿದರೆ, ಕಲ್ಲುಬಂಡೆ ನಿಂತರೆ ಅಲ್ಲೂ ಸಂಚಾರ  ಬಂದ್ ಆಗಲಿದೆ. ಹೀಗಾದರೆ ಮುಂದಕ್ಕೆ ಪರಿಸ್ಥಿತಿ ಎನ್ನುವುದನ್ನು ದೇವರೇ ಬಲ್ಲ.