ಮಂಗಳೂರು: ಮಹಜರಿಗೆ ಕೊಂಡೊಯ್ಯುವಾಗ ಚಡ್ಡಿಗ್ಯಾಂಗ್ ಆರೋಪಿಗಳು ಎಸ್ಕೇಪ್‌ಗೆ ಯತ್ನ - ಇಬ್ಬರಿಗೆ ಶೋಟ್‌ಔಟ್



ಮಂಗಳೂರು: ಸ್ಥಳ ಮಹಜರಿಗೆ ಕೊಂಡೊಯ್ಯುತ್ತಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿರಿವ ಚಡ್ಡಿಗ್ಯಾಂಗ್‌ನ ಇಬ್ಬರು ಆರೋಪಿಗಳಿಗೆ ಪೊಲೀಸರು ಶೂಟ್ಔಟ್ ನಡೆಸಿರುವ ಘಟನೆ ನಗರದ ಮುಲ್ಕಿ ಸಮೀಪದ ಪಡು ಪಣಂಬೂರು ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಗಾಯಗಳಾಗಿದೆ.

ಮಂಗಳವಾರ ನಸುಕಿನ ವೇಳೆ ಚಡ್ಡಿಗ್ಯಾಂಗ್‌ನ ನಾಲ್ವರಿದ್ದ ತಂಡ ಮಂಗಳೂರಿನ ಕೋಟೆಕಣಿಯ ಮನೆಯೊಂದಕ್ಕೆ ನುಗ್ಗಿ ದಂಪತಿಯನ್ನು ಬೆದರಿಸಿ 14ಲಕ್ಷ ಮೌಲ್ಯದ ಸೊತ್ತು ದರೋಡೆಗೈದು ಪರಾರಿಯಾಗಿತ್ತು. ಬಳಿಕ ಮನೆಯಿಂದ ಕದ್ದೊಯ್ದ ಕಾರನ್ನು ಮುಲ್ಕಿ ಬಳಿ ತೊರೆದು, ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಮತ್ತೆ ಮಂಗಳೂರಿಗೆ ಬಂದು ಬೆಂಗಳೂರಿಗೆ ಪರಾರಿಯಾಗಲೆತ್ನಿಸಿತ್ತು. ಅಷ್ಟರಲ್ಲಿ ಅಲರ್ಟ್ ಆದ ಪೊಲೀಸರು ಸಕಲೇಶಪುರ ಮಾರ್ಗದಲ್ಲಿದ್ದ ಬಸ್‌ಅನ್ನು ತಡೆದು ನಿಲ್ಲಿಸಿ ಚಡ್ಡಿಗ್ಯಾಂಗ್‌ನ ನಾಲ್ವರೂ ಆರೋಪಿಗಳನ್ನು ಬಂಧಿಸಿತ್ತು. 

ಅದರಂತೆ ಇಂದು ಸ್ಥಳ ಮಹಜರು ನಡೆಸಲು ಮಂಗಳೂರಿನಿಂದ ಆರೋಪಿಗಳನ್ನು ಮುಲ್ಕಿ ಕಡೆಗೆ ಪೊಲೀಸರು ಕರೆದೊಯ್ಯುತ್ತಿದ್ದರು. ಈ ವೇಳೆ ರಾಜು ಸಿಂಗ್ವಾನಿಯ(24) ಹಾಗೂ ಬಾಲಿ(22) ಎಂಬಿಬ್ಬರು ಆರೋಪಿಗಳು ಪೊಲೀಸರನ್ನು ತಳ್ಳಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಬಳಿಕ ಇಬ್ಬರ ಕಾಲಿಗೆ ಶೂಟ್ಔಟ್ ಮಾಡಿದ್ದಾರೆ. ಸದ್ಯ ಗಾಯಾಳು ಆರೋಪಿಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಗಳು ತಳ್ಳಿರುವ ಪರಿಣಾಮ ಇಬ್ಬರು ಪೊಲೀಸರಿಗೂ ಗಾಯವಾಗಿದ್ದು, ಅವರನ್ನು ನಗರದ ಎ‌.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.