Nelyady:- ವೃದ್ದೆಯ ಸರ ಎಗರಿಸಲು ಪ್ರಯತ್ನ.. ಗೂಸ ತಿಂದು ಪೋಲಿಸರ ಅಥಿತಿಗಳಾದ ಕಳ್ಳರು..


ವರದಿ; ಪ್ರಕಾಶ್ ಕೋಡಿಂಬಾಳ
ನೆಲ್ಯಾಡಿ/ಗುಂಡ್ಯ: 

ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ ಕಳ್ಳರಿಬ್ಬರನ್ನು ಸಾರ್ವಜನಿಕರ ಸಹಾಯದೊಂದಿಗೆ  ಹಿಡಿದು ವೃದ್ದೆಯೊಬ್ಬರು ಪೊಲೀಸರಿಗೊಪ್ಪಿಸಿದ ಘಟನೆ  ನೆಲ್ಯಾಡಿ ಸಮೀಪದ ಗುಂಡ್ಯ ಅಡ್ಡಹೊಳೆ ಎಂಬಲ್ಲಿ ಸೋಮವಾರ ನಡೆದಿದೆ. 

ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25) ಬಂಧಿತರು.

ಅಡ್ಡಹೊಳೆಯಲ್ಲಿ ಡ್ರೈಫ್ರೂಟ್ಸ್ ಸೇರಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯ ಒಡತಿ ತ್ರೇಸ್ಯಾಮಾ(60) ಆರೋಪಿಗಳನ್ನು ಹಿಡಿದುಕೊಟ್ಟ ದಿಟ್ಟ ಮಹಿಳೆ. ಈಕೆ ಅಂಗಡಿಯಲ್ಲಿ  ಒಬ್ಬಂಟಿಯಾಗಿದ್ದ  ವೇಳೆ ಸ್ಕೂಟಿಯೊಂದರಲ್ಲಿ  ಆಗಮಿಸಿದ ಕಳ್ಳರಿಬ್ಬರು ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಲು ಯತ್ನಿಸಿದ್ದಾರೆ.

 ತಕ್ಷಣ ಎಚ್ಚೆತ್ತ ಮಹಿಳೆ ಇಬ್ಬರನ್ನು ಸಾರ್ವಜನಿಕರ ಸಹಾಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ

ಇನ್ನು ಈ ಇಬ್ಬರು ಖದೀಮರು ತಾವು ಆಗಮಿಸಿದ ಸ್ಕೂಟಿಯನ್ನು ಸಹ ಕದ್ದುಕೊಂಡು ಬಂದಿದ್ದರು. ಮಂಗಳೂರಿನ ವಾಹನ ಮಾರಾಟಗಾರರೊಬ್ಬರ ಬಳಿ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು  ಸ್ಕೂಟಿ ಪಡೆದುಕೊಂಡು ಬೆಂಗಳೂರಿನತ್ತ ಪರಾರಿಯಾಗಿದ್ದರು . ದಾರಿ ಮಧ್ಯೆ ಅಡ್ಡಹೊಳೆಯಲ್ಲಿ ವೃದ್ದೆಯ ಕುತ್ತಿಗೆ ಸರ ಎಗರಿಸಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.