Kukke: ಸತ್ತ ನಾಗರ ಹಾವನ್ನು ಕುಕ್ಕೆ ಸುಬ್ರಹ್ಮಣ್ಯ ದೇಗುಲ ಕಚೇರಿ ಮುಂದಿಟ್ಟು ಪ್ರತಿಭಟನೆಗೆ ಮುಂದಾದ ವ್ಯಕ್ತಿ..!

 


ವರದಿ: ಪ್ರಕಾಶ್ ಕೋಡಿಂಬಾಳ

ಕುಕ್ಕೆ ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಆಡಳಿತ ಕಚೇರಿ ಮುಂಭಾಗ ವ್ಯಕ್ತಿಯೊಬ್ಬರು ಸತ್ತ ನಾಗರ ಹಾವು ಇಟ್ಟು ಪ್ರತಿಭಟನೆಗೆ ಮುಂದಾದ ಘಟನೆ ಜು.11 ರಂದು ನಡೆದಿದೆ.


ಕುಕ್ಕೆ ಬೈಪಾಸ್ ರಸ್ತೆಯಲ್ಲಿ ಯಾವುದೋ  ವಾಹನದಡಿಗೆ ಬಿದ್ದು ನಾಗರ ಹಾವು ಸತ್ತು  ಬಿದ್ದಿತ್ತು. ಇದನ್ನು ಗಮನಿಸಿದ ಗ್ರಾ.ಪಂ ಸದಸ್ಯ ರಾಜೇಶ್ ಎಂಬವರು ದೇಗುಲದ ಗಮನಕ್ಕೆ ತರಲು ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ. 

ದೇಗುಲದ ಕಡೆಯಿಂದ ಸಕಾಲಕ್ಕೆ  ಸ್ಪಂದನೆ ದೊರೆಯದ ಹಿನ್ನೆಲೆ ಆಕ್ರೋಶಕೊಂಡು   ದೇವಸ್ಥಾನದ ಆಡಳಿತ ಕಚೇರಿ ಮುಂದೆ ಸತ್ತ ಸರ್ಪವನ್ನಿಟ್ಟು  ಪ್ರತಿಭಟಿಸಿದ್ದಾರೆ.  ಸರ್ಪ ತಂದಿಟ್ಟು ಒಂದು ಗಂಟೆ ಕಳೆದರೂ ಸ್ಪಂದಿಸದ ಕಾರಣ  ಪುತ್ತೂರು ಎಸಿ  ಜುಬಿನ್ ಮಹಾಪಾತ್ರ ಅವರಿಗೆ ಪೋನ್ ಮೂಲಕ  ದೂರು ನೀಡಿದ್ದು ಹೀಗಾಗಿ  ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿರುವುದಾಗಿ ತಿಳಿದು ಬಂದಿದೆ.




ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರಾಜೇಶ್ ಅವರು, ಕುಕ್ಕೆಯಲ್ಲಿ ಸತ್ತು ಹೋದ ನಾಗನಿಗೆ  ಸಂಸ್ಕಾರ ಮಾಡಲು ನಿಮಗೆ ಅರ್ಚಕರು ಸಿಗುವುದಿಲ್ಲವೇ ಎಂದು ಪ್ರಶ್ನಿಸಿ , ಹತ್ತು ಹದಿನೈದು ಸಾವಿರ ಕೊಟ್ಟರೆ  ಐದು ನಿಮಿಷದಲ್ಲಿ ಅರ್ಚಕರು ಸಿಗ್ತಾರೆ, ಈ ರೀತಿ ನಾಗ ಸತ್ತರೆ ಯಾರೂ ಸಿಗಲ್ವಾ  ಎಂದು ಆರೋಶಭರಿತರಾಗಿ ದೇಗುಲದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಬೆಳವಣಿಗೆಯಲ್ಲಿ ಸತ್ತ ನಾಗರಹಾವಿಗೆ ಸೂಕ್ತ ರೀತಿಯಲ್ಲಿ ಸಂಸ್ಕಾರ ಮಾಡಿರುವುದಾಗಿ ತಿಳಿದು ಬಂದಿದೆ. .ಪ್ರತಿಭಟಿಸಿ ಆಕ್ರೋಶಭರಿತವಾಗಿ ಮಾತನಾಡಿರುವ  ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೇಳೆ  ಸ್ಥಳೀಯರು ಹಾಗೂ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು.