Kadaba:-ಯುವಕ ಹೊಳೆಗೆ ಹಾರಿರುವ ಶಂಕೆ. ಅಗ್ನಿಶಾಮಕ ದಳದಿಂದ ಶೋಧ.


ವರದಿ: ಪ್ರಕಾಶ್ ಕೋಡಿಂಬಾಳ
ಕಡಬ

ಇಲ್ಲಿನ ಕಾಣಿಯೂರು ವ್ಯಾಪ್ತಿಯ  ಕಾಯಿಮಣ ಗ್ರಾಮದ ನಾಯಿತಡ್ಕ ಎಂಬಲ್ಲಿನ ಅವಿವಾಹಿತ ಯುವಕನೋರ್ವ ಸೋಮವಾರ  ನಾಪತ್ತೆಯಾಗಿದ್ದು , ಹೊಳೆಗೆ ಹಾರಿರುವ  ಶಂಕೆಯಿಂದ ಶೋಧ ಕಾರ್ಯ ನಡೆದ ಘಟನೆ ವರದಿಯಾಗಿದೆ.

ಕಾಯಿಮಣ ಗ್ರಾಮದ ನಾಯಿತ್ತಡ್ಕ ನಿವಾಸಿ ಹುಕ್ರ ಎಂಬವರ ಪುತ್ರ ಸುರೇಶ (40) ನಾಪತ್ತೆಯಾದ ಯುವಕ.

ಕೂಲಿ ಕೆಲಸ ಮಾಡುತ್ತಿದ್ದ ಇವರು ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿ ಯಾರೊಂದಿಗೂ ಹೆಚ್ಚಾಗಿ ಮಾತನಾಡದೇ ಇರುತ್ತಿದ್ದರು ಎಂದು ತಿಳಿದು ಬಂದಿದೆ.

ಎರಡು ದಿನದಿಂದ ಹುಟುಕಾಟ ನಡೆಸಿದರೂ ಪತ್ತೆಯಾಗಿಲ್ಲವೆಂದು ನಾಪತ್ತೆಯಾದ ಯುವಕನ  ಸಹೋದರ ಚಿದಾನಂದ ಎಂಬವರು ಬೆಳ್ಳಾರೆ ಠಾಣೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ  ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ವೇಳೆ ಕಾಪೆಜಾಲು ಹೊಳೆ ಬದಿಯಲ್ಲಿ ಶರ್ಟ್ ಮತ್ತು ಛತ್ರಿ ಪತ್ತೆಯಾಗಿದ್ದು,  ಹೊಳೆಗೆ ಬಿದ್ದಿರಬಹುದು ಎನ್ನು‌ವ ಸಂಶಯ ವ್ಯಕ್ತವಾಗಿ  ಅಗ್ನಿಶಾಮಕ ದಳದವರು ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ.

ಹೊಳೆ ನೀರಿನಲ್ಲಿ ಇಳಿ ಸಂಜೆಯ ತನಕ ಶೋಧ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ . ಸ್ಥಳಕ್ಕೆ ಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ, ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಬೀರ, ಪಿಡಿಓ ನಾರಾಯಣ್, ಗ್ರಾಮ ಆಡಳಿತಾಧಿಕಾರಿ ಪುಷ್ಪರಾಜ್ ಸ್ಥಳಕ್ಕೆ ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.