ಬೆಂಗಳೂರು: ತನಗೆ ಜೈಲಿನಲ್ಲಿ ಮನೆ ಊಟ ಕೊಡುವಂತೆ ರೇಣುಕಾಸ್ವಾಮಿ
ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಸಲ್ಲಿಸಿದ್ದ
ಅರ್ಜಿಯನ್ನು, ನ್ಯಾಯಾಲಯ
ವಜಾಗೊಳಿಸಿದೆ. ಹೀಗಾಗಿ ದರ್ಶನ್ ಗೆ ಜೈಲೂಟವೇ ಗ್ಯಾರಂಟಿಯಾಗಿದೆ.
ದರ್ಶನ್ ಗ್ಯಾಂಗ್
ನಿಂದ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ಮನೆಯೂಟ, ಪುಸ್ತಕ ಹಾಸಿಗೆ ಕೋರಿ ನಟ ದರ್ಶನ್ ಪರ ವಕೀಲ ರಾಘವೇದ್ರ ಅವರು 24ನೇ ಎಸಿಎಂಎಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ
ಮಾಡಿದ್ದರು. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ವಿಶ್ವನಾಥ್.ಸಿ. ಗೌಡರ್ ಅವರ ಮುಂದೆ
ನಟ ದರ್ಶನ್ ಪರ ವಕೀಲ ರಾಘವೇಂದ್ರ ವಾದ ಮಂಡನೆ ಮಾಡಿದ್ದಾರೆ. ಈ ವೇಳೆ ಜೈಲಿನಲ್ಲಿರುವ ವಿಚಾರಣಾಧೀನ
ಖೈದಿಗಳು ಮನೆಯಿಂದ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶ ಇದೆ. ಒಂದು ವೇಳೆ ತಮ್ಮ
ವ್ಯವಸ್ಥೆ ಮಾಡಿಕೊಳ್ಳಲು ಆಗದಿದ್ದಾಗ ಜೈಲಿನಲ್ಲಿ ಪಡೆಯಲು ಅವಕಾಶ ಇದೆ. ಹೊರಗಿನಿಂದ ಊಟ,
ಬಟ್ಟೆ, ಹಾಸಿಗೆ ಪಡೆಯಲು ಅವಕಾಶ ನೀಡುವ ಅಧಿಕಾರ ಜೈಲು ಐಜಿಪಿಗೆ
ನೀಡಲಾಗಿದೆ. ತಮ್ಮ ಸೌಲಭ್ಯಗಳನ್ನು ತಾವು ಪಡೆದುಕೊಳ್ಳಲು ಆಗದೇ ಇದ್ದಾಗ ಮಾತ್ರ ಜೈಲು ಅಥಾರಿಟಿ
ನೀಡಬಹುದು ಎಂದು ಕಾನೂನು ಮಾಡಲಾಗಿದೆ ಎಂದು ವಾದ ಮಂಡನೆ ಮಾಡಿದ್ದರು.
ಆದರೆ, ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಆದೇಶವನ್ನು ಜು.25ಕ್ಕೆ ಕಾಯ್ದಿರಿಸಿದ್ದರು. ಇಂದು ದರ್ಶನ್ ಅರ್ಜಿಯನ್ನು
ಕೈಗೆತ್ತಿಕೊಂಡ ನ್ಯಾಯಾಧೀಶರು ನಟ ದರ್ಶನ್ ಮನೆ ಊಟ, ಮನೆಯ ಹಾಸಿಗೆ ಹಾಗೂ ಪುಸ್ತಕ ನೀಡುವಂತೆ ಸಲ್ಲಿಕೆ
ಮಾಡಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ. ಈ ಮೂಲಕ ಮನೆ ಊಟ ಸೌಲಭ್ಯ ಪಡೆಯುವ ನಿರೀಕ್ಷೆಯಲ್ಲಿದ್ದ
ದರ್ಶನ್ ಗೆ ಶಾಕ್ ನೀಡಲಾಗಿದೆ. ಇನ್ನು ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿ ವಿಚಾರಣಾಧೀನ
ಕೈದಿಯಾಗಿರುವ ನಟ ದರ್ಶನ್ ಗೆ ಯಾವುದೇ ವಿಶೇಷ ಸೌಲಭ್ಯ ಇಲ್ಲ. ಸಾಮಾನ್ಯ ಕೈದಿಗಳಿಗೆ ನೀಡುವ ಊಟವೇ
ದರ್ಶನ್ ಗೆ ನೀಡಲಾಗುತ್ತದೆ.
ಕರ್ನಾಟಕ
ಪ್ರಿಸನ್ಸ್ ಕರೆಕ್ಷನ್ ಮ್ಯಾನ್ಯುಲ್ 2021 ರ ಸೆಕ್ಷನ್ 728ರ ಪ್ರಕಾರ ಕೊಲೆ ಆರೋಪಿಗೆ ಮನೆ ಊಟಕ್ಕೆ ಅವಕಾಶ ಇಲ್ಲ. ಜೈಲು ಅಧಿಕಾರಿಗಳು ನೀಡಿರುವ ವರದಿಯಲ್ಲಿ ಮನೆಯೂಟದ
ಅವಶ್ಯಕತೆ ಕಾಣಿಸುತ್ತಿಲ್ಲ. ಮನೆ ಊಟದ ಅವಶ್ಯಕತೆ
ಸಂಬಂಧ ಪೂರಕವಾದ ವೈದ್ಯಕೀಯ ಪ್ರಮಾಣಪತ್ರಗಳು
ಇಲ್ಲ. ಈ ಮೂರು ಅಂಶಗಳನ್ನು
ಮುಂದಿಟ್ಟುಕೊಂಡು ಮನೆ ಊಟದ ಬೇಡಿಕೆಯನ್ನು
ನ್ಯಾಯಾಧೀಶರಾದ ವಿಶ್ವನಾಥ್.ಸಿ. ಗೌಡರ್ ಅವರು ಕೊಲೆ ಆರೋಪಿ ನಟ ದರ್ಶನ್ ಸಲ್ಲಿಕೆ ಮಾಡಿದ್ದ ಮನೆ
ಊಟದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಹೀಗಾಗಿ ಮನೆಯೂಟ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದ ದರ್ಶನ್ ಗೆ ತೀವ್ರ
ನಿರಾಸೆಯಾಗಿದೆ.
Social Icons