ಕೆಮ್ಮಿನ‌ ಸಿರಪ್‌ ಬಾಟಲ್ ನುಂಗಿದ ನಾಗರಹಾವು| ಮುಂದೆ ಆಗಿದ್ದೇನು ಗೊತ್ತೇ?! | Cough Syrup Bottle

ನವದೆಹಲಿ: ಎಲ್ಲೆಂದರಲ್ಲಿ ನಾವು ಎಸೆಯುವ ತ್ಯಾಜ್ಯವು ನಮ್ಮ ಪರಿಸರದಲ್ಲಿ ಪ್ರಾಣಿ, ಪಕ್ಷಿಗಳು, ಸರೀಸೃಪಗಳು ಸಹಿತ ಸಕಲ ಜೀವರಾಶಿಗಳಿಗೆ ಬಹಳ ಸಂಕಷ್ಟ ತಂದೊಡ್ಡುತ್ತಿದೆ. ಈ ಮಾತಿಗೆ ಅನೇಕ ಪೂರಕ ಸಾಕ್ಷ್ಯಾಧಾರಗಳು ಸಿಕ್ಕಿವೆ. ಇದೀಗ ಇಂತಹುದೇ ಒಂದು ಘಟನೆ ‌ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. 



ಈ ಘಟನೆಯಲ್ಲಿ ನಾಗರಹಾವೊಂದು ಕೆಮ್ಮಿನ ಸಿರಪ್ ಬಾಟಲಿಯನ್ನು ನುಂಗಿ ಪರದಾಟಕ್ಕೆ ಸಿಲುಕಿದೆ. ಅದನ್ನು ಅರಗಿಸಿಲೊಳ್ಳಲು ಆಗಲ್ಲ ಅಂತ ಗೊತ್ತಾದಾಗ ಬಾಟಲ್‌ನ್ನು ಪುನಃ ಹೊರಹಾಕಲು  ಬಹಳಷ್ಟು ಪ್ರಯತ್ನಪಟ್ಟಿದೆ‌. ಹಾವು ಬಾಟಲನ್ನು ನುಂಗಲೂ ಆಗದೆ, ಉಗುಳಲೂ ಆಗದೆ ಪರದಾಡುತ್ತಿದ್ದ ದೃಶ್ಯಗಳನ್ನು ಯಾರೋ ಮೊಬೈಲ್‌ ನಲ್ಲಿ ಸೆರೆಹಿಡಿದು‌ ಹರಿಬಿಟ್ಟಿದ್ದಾರೆ.

ಬಾಟಲಿಯನ್ನು ನುಂಗಿ ಪರದಾಟಕ್ಕೆ ಸಿಲುಕಿದ ಹಾವಿನ ವಿಷಯವನ್ನು ತಕ್ಷಣ ಸ್ನೇಕ್‌ ಹೆಲ್ಪ್‌ ಲೈನ್‌ ಸಿಬ್ಬಂದಿಗೆ ಗೊತ್ತಾಗಿ  ಹಾವಿನ ಬಾಯಲ್ಲಿ ಸಿಕ್ಕಿಹಾಕಿಕೊಂಡ ಬಾಟಲಿಯನ್ನು ಹೊರ ತೆಗೆದಿದ್ದಾರೆ. ಈ ಕುರಿತು  ವಿಡಿಯೋ ಇದೀಗ ಎಲ್ಲೇಡೆ ವೈರಲ್‌ ಆಗುತ್ತಿದೆ.

ಭಾರತೀಯ ಅರಣ್ಯಾಧಿಕಾರಿ ಸುಸಾಂತ ನಂದಾ (Susantananda3) ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಸ್ನೇಕ್‌ ಹೆಲ್ಪ್‌ಲೈನ್‌ ಸಿಬ್ಬಂದಿ ನಾಗರ ಹಾವಿನ ಗಂಟಲಲ್ಲಿ ಸಿಲುಕಿದ ಕೆಮ್ಮಿನ ಸಿರಪ್‌ ಬಾಟಲಿಯನ್ನು ಹೊರ ತೆಗೆಯುವ ಮೂಲಕ ಅಮೂಲ್ಯ ಜೀವವನ್ನು ರಕ್ಷಿಸಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಜನರು ಬೇಜವಾಬ್ದಾರಿಯಿಂದ ಎಲ್ಲೆಂದರಲ್ಲಿ ಕಸ ಎಸೆದು ಮೂಕ ಪ್ರಾಣಿಗಳ ಪ್ರಾಣಕ್ಕೆ ಕಂಟಕ ತಂದೊಡ್ಡುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಇನ್ನು ಮುಂದಾದರೂ ಜನರ ಬೇಜವಾಬ್ದಾರಿಯುತ ನಡವಳಿಕೆ ಬದಲಾಗಲಿ‌ ಎನ್ನುವುದು ಆಶಯವಾಗಿದೆ.