ಬಂಟ್ವಾಳ : ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿ ಜೀವನದ ಬೆಳವಣಿಗೆಗೆ ಅಡಿಗಲ್ಲು. ಬಾಲ್ಯದಿಂದಲೇ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದೊಂದಿಗೆ ನಾಯಕತ್ವದ ಗುಣ ಬೆಳೆಸಿಕೊಂಡರೆ, ಭವಿಷ್ಯದಲ್ಲಿ ಅವರ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ನಂಬಿಕೆ, ದೃಢತೆ, ಸಾಮರಸ್ಯದೊಂದಿಗೆ ಭವಿಷ್ಯದತ್ತ ಹೆಜ್ಜೆ ಹಾಕಿ ಎಂದು ಬಂಟ್ವಾಳದ ಎಸ್.ವಿ.ಎಸ್ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಡಾ.ಸುಯೋಗ ವರ್ಧನ್ .ಡಿ.ಎಂ ಹೇಳಿದರು.
ಬಂಟ್ವಾಳದ ವಿದ್ಯಾಗಿರಿಯಲ್ಲಿರುವ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ೨೦೨೪-೨೫ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ
ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಿನ್ಸಿಪಾಲ್ ಜೂಲಿ.ಟಿ.ಜೆ ಪ್ರತಿಜ್ಙಾ ವಿಧಿ ನೆರವೇರಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೈಸ್
ಪ್ರಿನ್ಸಿಪಾಲ್ ಪೂರ್ಣೇಶ್ವರಿ ಭಟ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸುರೇಖ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ನಾಯಕ ಕೀತ್ ಈವನ್ ಅಲ್ವಾರಿಸ್, ಉಪನಾಯಕಿ ಚಿನ್ಮಯಿ ಶೆಟ್ಟಿ ಜೊತೆಗೆ ಇತರ ೨೪ ನಾಯಕರು ಅಧಿಕಾರ ವಹಿಸಿಕೊಂಡರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹತ್ತನೇ ತರಗತಿಯ ಪ್ರಾಪ್ತಿ ಆಳ್ವ, ಸ್ವಸ್ತಿಕ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.

Social Icons