Ullala: ಬಿಜೆಪಿ ವಿಜಯೋತ್ಸವದ ಬಳಿಕ ಚೂರಿ ಇರಿತ - ಮೂವರು ಅರೆಸ್ಟ್, ಗಲಾಟೆಯ ಭೀಕರ ದೃಶ್ಯ ಲಭ್ಯ


ಉಳ್ಳಾಲ: ನಗರದ ಬೋಳಿಯಾರುವಿನಲ್ಲಿ ರವಿವಾರ ಸಂಜೆ ವೇಳೆ ಬಿಜೆಪಿ ವಿಜಯೋತ್ಸವದ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಘಟನೆಗಿಂತಲೂ ಮೊದಲು ಮಸೀದಿಯ ಮುಂಭಾಗ ನಡೆದ ಗಲಾಟೆಯ ಭೀಕರ ದೃಶ್ಯ ಲಭ್ಯವಾಗಿದೆ‌.

ನರೇಂದ್ರ ಮೋದಿಯವರು ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಪದಗ್ರಹಣ ಮಾಡಿರುವ ಹಿನ್ನೆಲೆಯಲ್ಲಿ ವಿಜಯೋತ್ಸವ ನಡೆದಿತ್ತು. ಅದರಂತೆ ಅಲ್ಲಿಯೇ ಇದ್ದ ಮಸೀದಿ ಮುಂಭಾಗದಿಂದ ವಿಜಯೋತ್ಸವದ ಮೆರವಣಿಗೆ ಸಾಗಿತ್ತು.

ವಿಜಯೋತ್ಸವದ ಬಳಿಕ ಮಸೀದಿಯ ಬಳಿ ಬೈಕ್ ನಲ್ಲಿ ಬಂದ ಮೂವರು ಬಿಜೆಪಿ ಕಾರ್ಯಕರ್ತರು 'ಬೋಲೋ ಭಾರತ್ ಮಾತಾ ಕೀ ಜೈ' ಘೋಷಣೆ ಕೂಗಿದ್ದಾರೆ. ಈ ವೇಳೆ ಮಸೀದಿ ಮುಂಭಾಗದಲ್ಲಿದ್ದ ಯುವಕರು ಅವರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಅಲ್ಲಿಯೇ ಸ್ವಲ್ಪ ದೂರವಿರುವ ಬಾರ್ ಮುಂಭಾಗ ದಾಂಧಲೆ ನಡೆಸಿ ಇಬ್ಬರಿಗೆ ಚೂರಿಯಿಂದ ಇರಿದಿದ್ದಾರೆ. ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಬೋಳಿಯಾರುವಿನಲ್ಲಿ ಮೂರು ಕೆಎಸ್ಆರ್ ಪಿ ತುಕಡಿ ಬೀಡುಬಿಟ್ಟಿದೆ.