ಮಾಜಿ ಸಿಎಂ ಯಡಿಯೂರಪ್ಪಗೆ ಪೊಕ್ಸೊ ವಿಚಾರಣೆ ಸಂಕಷ್ಟ - ತಲೆಮೇಲೆ ಬಂಧನದ ತೂಗುಗತ್ತಿ



ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಿಐಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಈ ಮೂಲಕ ಯಡಿಯೂರಪ್ಪ ಬಂಧನದ ಭೀತಿ ಎದುರಾಗಿದೆ.

ಈ ನಡುವೆ ಅಗತ್ಯವೆನಿಸಿದರೆ ಸಿಐಡಿಯವರು ಯಡಿಯೂರಪ್ಪ ಅವರನ್ನು ಬಂಧಿಸುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿರುವುದು, ಯಡಿಯೂರಪ್ಪ ತಲೆಮೇಲೆ ತೂಗುಗತ್ತಿ ತೂಗಿದಂತಿದೆ‌.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪೊಲೀಸ್ ಅಧಿಕಾರಿಗಳು ಜೂನ್ 15ರೊಳಗೆ ಚಾರ್ಜ್ ಶೀಟ್ ಸಲ್ಲಿಸಬೇಕಾಗಿದ್ದು, ಅಷ್ಟರಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಲೂ ಹೇಳಿಕೆ ಪಡೆಯುತ್ತಾರೆ. ಈ ಬಗ್ಗೆ ನಾನು ಏನೂ ಹೇಳಲು ಆಗದು, ಅಗತ್ಯವಿದ್ದರೆ ಸಿಐಡಿಯವರು ಯಡಿಯೂರಪ್ಪ ಅವರನ್ನು ಬಂಧಿಸುತ್ತಾರೆ ಎಂದು ತಿಳಿಸಿದರು.