ಮಂಗಳೂರು: ಪಾಕಿಸ್ತಾನದ ಕುನ್ನಿಗಳೆಂದರೆ ಖಾದರ್ ಸಾಮ್ರಾಜ್ಯದವರಿಗೇಕೆ ಪ್ರಚೋದನೆಯಾಗಬೇಕು- ಸಿ.ಟಿ.ರವಿ ಪ್ರಶ್ನೆ


ಮಂಗಳೂರು: "ಪಾಕಿಸ್ತಾನದ ಕುನ್ನಿಗಳೇ'' ಎಂದು ಹೇಳಿದರೆ ಪಾಕ್ ಕುನ್ನಿಗಳು ಪ್ರಚೋದನೆಗೆ ಒಳಗಾಗಬೇಕು. ಆದರೆ ಸ್ಪೀಕರ್ ಖಾದರ್ ಸಾಮ್ರಾಜ್ಯ ಉಳ್ಳಾಲದಲ್ಲಿ ಪಾಕ್ ಕುನ್ನಿಗಳು ಇನ್ನೂ ಇದ್ದಾರೆ ಅಂದಾಯ್ತು. ಮಂಗಳೂರು ಪೊಲೀಸ್ ಕಮಿಷನರ್ ಪಾಕಿಸ್ತಾನದ ಕುನ್ನಿಗಳನ್ನು ಗುರುತಿಸಿ, ಕೇಸು ಹಾಕಿ ಅವರನ್ನು ಗಡೀಪಾರು ಮಾಡಲಿ. ಖಾದರ್ ಅವರೇ ಗುರುತಿಸಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಲಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.

ಮಂಗಳೂರು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಹುಟ್ಟಿದವರಿಗೆ ಮಾತ್ರ ಭಾರತ್ ಮಾತಕೀ‌ ಜೈ ಅಂದರೆ ಪ್ರಚೋದನೆಯಾಗುತ್ತದೆ. ಪಾಕಿಸ್ತಾನಕ್ಕೆ ಬೈದಾಗ ನಮಕ್ ಹರಾಂಗಳಿಗೆ ಮಾತ್ರ ಪ್ರಚೋದನೆ ಆಗುತ್ತದೆ. ಆದರೆ ಮಂಗಳೂರಿನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಪಾಕಿಸ್ತಾನದ ಕುನ್ನಿಗಳೇ ಎಂದಿದ್ದಕ್ಕೆ ಮಸೀದಿಯ ಎರಡೂ ಬದಿ ನಿಂತಿದ್ದವರು ಪ್ರಚೋದನೆಗೊಳಗಾಗಿ ಚೂರಿಯಿಂದ ಇರಿದಿದ್ದಾರೆ ಎಂದಿದ್ದಾರೆ. ಅನುಪಮ್ ಅಗರ್ವಾಲ್ ಏಕೆ ಪಾಕಿಸ್ತಾನದ ಕಮಿಷನರ್ ಥರ ವರ್ತಿಸುತ್ತಾರೆ. ತಾವು ಪಾಕಿಸ್ತಾನದ ಅಧಿಕಾರಿಯಲ್ಲ, ಭಾರತದ ಪೊಲೀಸ್ ಅಧಿಕಾರಿ. ಕಮಿಷನರ್ ಹೇಳಿಕೆ ಸಮರ್ಥನೀಯವಲ್ಲ, ಅದನ್ನ ವಾಪಸ್ ಪಡೆಯಲಿ‌ಅವರು ಕೊಟ್ಟ ದೂರಿಗೆ ತಕ್ಷಣ ಬಿ ರಿಪೋರ್ಟ್ ಹಾಕಬೇಕು ಎಂದು ಹೇಳಿದರು.

ಇರಿತಕ್ಕೆ ಒಳಗಾದ ಹರೀಶ್, ನಂದನ್ ಕುಟುಂಬಕ್ಕೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ರಾಜಧರ್ಮದ ಬಗ್ಗೆ ಮಾತನಾಡುವ ಸ್ಪೀಕರ್ ಹಾಗೂ ಉಸ್ತುವಾರಿ ಸಚಿವರು ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ಬಂದರೂ ಗಾಯಾಳುಗಳನ್ನು ಭೇಟಿಯಾಗಿಲ್ಲ. ಗಾಯಾಳುಗಳು ಪಾಕಿಸ್ತಾನದ ಕುನ್ನಿಗಳಾಗಿದ್ದರೆ ಅವರು ಆಸ್ಪತ್ರೆಯಲ್ಲೇ ಇರುತ್ತಿದ್ದರು. ಆದರೆ ಗಾಯಾಳುಗಳು ಭಾರತ‌ಮಾತೆಯ ಸುಪುತ್ರರಾದ ಕಾರಣ ಇವರು ಆಸ್ಪತ್ರೆಗೆ ಬಂದಿಲ್ಲ ಎಂದು ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.