ವಾರೆಂಟ್ ಇದ್ದರೆ, ಪೊಲೀಸರು ಆರೋಪಿಯನ್ನು ಬಂಧಿಸಲೇಬೇಕು, ನಾಪತ್ತೆ ಎಂಬ ಸಬೂಬು ಬೇಡ- ಖಾಕಿಗೆ ಹೈಕೋರ್ಟ್‌ ಖಡಕ್ ಎಚ್ಚರಿಕೆ

ವಾರೆಂಟ್ ಇದ್ದರೆ, ಪೊಲೀಸರು ಆರೋಪಿಯನ್ನು ಬಂಧಿಸಲೇಬೇಕು, ನಾಪತ್ತೆ ಎಂಬ ಸಬೂಬು ಬೇಡ- ಖಾಕಿಗೆ ಹೈಕೋರ್ಟ್‌ ಖಡಕ್ ಎಚ್ಚರಿಕೆ





ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಹೊರಡಿಸಿದ ಕೋರ್ಟ್‌ ವಾರೆಂಟ್‌ಗಳನ್ನು ಜಾರಿಗೊಳಿಸುವುದು ಪೊಲೀಸರ ಕರ್ತವ್ಯ. ವಾರೆಂಟ್ ಜಾರಿಯಾದ ಆರೋಪಿ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.


ಶ್ರೀವಿದ್ಯ ಸಿಂಗ್ Vs ಉತ್ತರ ಪ್ರದೇಶ ಸರ್ಕಾರ ಮತ್ತಿತರರು ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನ ನ್ಯಾ. ವಿಕ್ರಮ್ ಡಿ. ಚೌಹಾಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಆರೋಪಿಗಳು ಎಲ್ಲಿದ್ದರೂ ಅವರನ್ನು ಪತ್ತೆ ಹಚ್ಚುವುದು ಮತ್ತು ವಾರೆಂಟ್ ಜಾರಿಗೊಳಿಸುವುದು ಪೊಲೀಸರ ಕರ್ತವ್ಯ. ಆರೋಪಿಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.


ಸದ್ರಿ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದರೂ ಅರೋಪಿಯನ್ನು ಪೊಲೀಸರು ಬಂಧಿಸಿರಲಿಲ್ಲ. ಅವರ ವಿರುದ್ಧ ಸೆಕ್ಷನ್ 82 ಮತ್ತು 83ರ ಅನ್ವಯ ಪ್ರಕ್ರಿಯೆಯನ್ನು ನ್ಯಾಯಾಲಯ ಮುಂದುವರಿಸಿತ್ತು. ಇಷ್ಟಾದರೂ ಪೊಲೀಸರು ವಾರೆಂಟ್ ಜಾರಿಗೊಳಿಸುವಲ್ಲಿ ಯಶಸ್ವಿಯಾಗುತ್ತಿರಲಿಲ್ಲ.


ಆರೋಪಿ ವಿರುದ್ಧ ಮೂರು ವರ್ಷಗಳಿಂದ ವಾರೆಂಟ್ ಜಾರಿಯಲ್ಲಿದ್ದರೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಾವುದೇ ಆಸಕ್ತಿ ವಹಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ, ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಕಠಿಣ ಶಬ್ದಗಳ ಮೂಲಕ ತರಾಟೆಗೆ ತೆಗೆದುಕೊಂಡಿತು.