Belthangady: 25 ಆಡುಗಳನ್ನು ಬಲಿನೀಡಿ ಭಯಾನಕ ವಾಮಾಚಾರ - ಭಾವಚಿತ್ರ ಇಟ್ಟು ಮಾಟಮಂತ್ರ - ಬೆಚ್ಚಿಬಿದ್ದ ಸ್ಥಳೀಯರು



ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯ ಬೋಳಿಯಾರುವಿನಲ್ಲಿ ಸ್ಥಳೀಯರು ಬೆಚ್ಚಿ ಬೀಳಿಸುವಂತ ರೀತಿಯ ವಾಮಾಚಾರ ನಡೆದಿದೆ. ಬರೋಬ್ಬರಿ 25 ಆಡುಗಳನ್ನು ಬಲಿನೀಡಿ ಸತ್ತ ಆಡಿನ ತಲೆಗಳಿಗೆ ವ್ಯಕ್ತಿಗಳ ಭಾವಚಿತ್ರವಿಟ್ಟು ಮಾಟಮಂತ್ರ ಮಾಡಲಾಗಿದೆ.

ಜಮೀನೊಂದರ ತಕರಾರು ಹಿನ್ನೆಲೆಯಲ್ಲಿ ಈ ವಾಮಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕೃಷಿತೋಟವೊಂದರ ಗೇಟಿನ ಮುಂಭಾಗ ಈ ವಾಮಾಚಾರ ನಡೆದಿದೆ. ವಾಮಾಚಾರ ನಡೆದ ಸ್ಥಳದಲ್ಲಿ 25 ಆಡಿನ ತಲೆ, ಮೊಟ್ಟೆ, ಮರದ ಪ್ರತಿಕೃತಿ, ಭಾವಚಿತ್ರ, ಹೂವು ಇಟ್ಟು, ಮೊಳೆಹೊಡೆದು ಮಾಟ ಮಂತ್ರ ಮಾಡಲಾಗಿದೆ.

ಜಾಗದ ಮಾಲೀಕರಾದ ಗೋಪು ಕುಮಾರ್, ಸುಮೇಶ್ ಹಾಗೂ ಇನ್ನಿತರರ ಸಮಾಜದ ಕೆಲವು ಗಣ್ಯ ವ್ಯಕ್ತಿಗಳ ಫೋಟೋಗಳನ್ನು ವಾಮಾಚಾರಕ್ಕೆ ಬಳಸಲಾಗಿದೆ. ಮಂಗಳೂರಿನ ರಾಜೇಶ್ ಪ್ರಭು ಎಂಬಾತನ ವಿರುದ್ಧ ವಾಮಾಚಾರದ ಆರೋಪವಿದೆ. ರಾಜೇಶ್ ಪ್ರಭು ಹಾಗೂ ಗೋಪು ಕುಮಾರ್ ನಡುವೆ ಜಾಗದ ತಕರಾರು ಇತ್ತು. ಆದ್ದರಿಂದ ರಾಜೇಶ್ ಪ್ರಭು ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಗೋಪು ಕುಮಾರ್ ಹಾಗೂ ಸಂಗಡಿಗರು ಸನ್ನದ್ಧರಾಗಿದ್ದರು‌.

ಇದೆ ಕಾರಣಕ್ಕೆ ಗೋಪು ಕುಮಾರ್ ಸಹಿತ ಬೆಂಬಲಿಸಿದವರ ವಿರುದ್ಧವೂ ವಾಮಾಚಾರ ಪ್ರಯೋಗ ಮಾಡಲಾಗಿದೆ. ವಾಮಾಚಾರ ನೋಡಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಕೃತ್ಯ ಎಸಗಿದವರ ವಿರುದ್ಧ ವ್ಯಾಪಾಕ ಆಕ್ರೋಶ ಕೇಳಿ ಬರುತ್ತಿದೆ.