ಅಯೋಧ್ಯೆಯ ರಾಮ ಮಂದಿರದ ಆವರಣದಲ್ಲಿ ಗುಂಡೇಟು| ಕರ್ತವ್ಯನಿರತ ಯೋಧ ಸಾವು| ರಾತ್ರಿ ಅಲ್ಲಿ ನಡೆದದ್ದೇನು?| Ayodhya

 ಉತ್ತರ ಪ್ರದೇಶ: 2024ರ ಜನವರಿಯಲ್ಲಿ ಲೋಕಾರ್ಪಣೆಗೊಂಡಿದ್ದ ಅಯೋಧ್ಯೆಯ ರಾಮಮಂದಿರದ ಆವರಣದಲ್ಲಿ ದುರ್ಘಟನೆಯೊಂದು ನಡೆದಿದೆ. ಗುಂಡು ತಗುಲಿ ಉತ್ತಪ್ರದೇಶ ವಿಶೇಷ ಭದ್ರತಾ ಪಡೆ ಯೋಧರೊಬ್ಬರು ಮೃತಪಟ್ಟಿದ್ದಾರೆ. ಮಂಗಳವಾರ ತಡರಾತ್ರಿ ದುರ್ಘಟನೆ ನಡೆದಿದೆ.

 ಉತ್ತರ ಪ್ರದೇಶದ ಅಂಬೇಡ್ಕರ್‌ ನಗರದ ನಿವಾಸಿಯಾದ ಶತ್ರುಘ್ನ ವಿಶ್ವಕರ್ಮ (25) ಎಂಬವರು ಮೃತಪಟ್ಟ ಯೋಧ. ಯುಪಿಎಸ್‌ಎಸ್‌ಎಫ್‌ನ ಪೇದೆಯಾಗಿದ್ದ ಶತ್ರುಘ್ನ, ಅಯೋಧ್ಯೆಯ ದೇವಾಲಯದ ಆವರಣದಲ್ಲಿ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದರು. ಮಂಗಳವಾರ ತಡರಾತ್ರಿ ಇವರ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಅದು ಅವರಿಗೇ ತಗುಲಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು. ಮೃತ ಯೋಧನ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮಮಂದಿರ ಸಂಕೀರ್ಣದ 150 ಮೀಟರ್‌ ದೂರವಿರುವ ಕೋಟೇಶ್ವರ ದೇವಾಲಯದ ಎದುರು ವಿಐಪಿ ಗೇಟ್‌ ನಿರ್ಮಿಸಲಾಗುತ್ತಿದೆ. ದೇವಸ್ಥಾನದ ಭದ್ರತೆಗಾಗಿ ಯೋಗಿ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಎಸ್‌ಎಸ್‌ಎಫ್ ಪಡೆಯನ್ನು ರಚಿಸಿತ್ತು. . ಅಲ್ಲಿ ಶತ್ರುಘ್ನ ವಿಶ್ವಕರ್ಮ ಅವರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಹಲವು ಭದ್ರತಾ ಸಿಬ್ಬಂದಿ ಕೂಡ ರಾತ್ರಿ ಇದ್ದರು. ಈ ವೇಳೆ ಅವರ ಬಂದೂಕಿನಿಂದಲೇ ಆಕಸ್ಮಿಕವಾಗಿ ಗುಂಡು ಹಾರಿದ್ದು, ಅದು ಅವರಿಗೇ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೂ ಮುನ್ನ ಶತ್ರುಘ್ನ ಮೊಬೈಲ್ ನೋಡುತ್ತಿದ್ದ ಎಂದು ಮೃತ ಯೋಧನ ಸಹೋದ್ಯೋಗಿಗಳು ತಿಳಿಸಿದ್ದಾರೆ. ಪೊಲೀಸರು ಅವರ ಮೊಬೈಲ್ ಅನ್ನು ಕೂಡ ವಿಚಾರಣೆಗೆ ಕಳುಹಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.