"ವಕೀಲರ ಸಂರಕ್ಷಣಾ ಕಾಯ್ದೆ" ಜಾರಿಗೆ: ಇನ್ಮೇಲೆ ಕರ್ತವ್ಯನಿರತ ವಕೀಲರ ಮೈಮುಟ್ಟಿದರೆ ಜೋಕೆ!

"ವಕೀಲರ ಸಂರಕ್ಷಣಾ ಕಾಯ್ದೆ" ಜಾರಿಗೆ: ಇನ್ಮೇಲೆ ಕರ್ತವ್ಯನಿರತ ವಕೀಲರ ಮೈಮುಟ್ಟಿದರೆ ಜೋಕೆ!





ಇನ್ಮೇಲೆ ಕರ್ತವ್ಯ ನಿರತ ವಕೀಲರ ಮೈಮುಟ್ಟಿದರೆ ಜೋಕೆ. ರಾಜ್ಯದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿದೆ. ರಾಜ್ಯ ಸರ್ಕಾರ ಈ ಬಗ್ಗೆ ಗಜೆಟ್ ನೋಟಿಫಿಕೇಶನ್ ಪ್ರಕಟಿಸಿದ್ದು, ಕಾಯ್ದೆ ಅಧಿಕೃತವಾಗಿ ಜಾರಿಗೆ ಬಂದಿದೆ.


10-06-2024ರಿಂದ ಕರ್ನಾಟಕ ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ ಜಾರಿಗೊಳಿಸಿ ರಾಜ್ಯಪತ್ರವನ್ನು ಹೊರಡಿಸಲಾಗಿದೆ.


ಕಳೆದ ವರ್ಷ, ಅಂದರೆ, 2023ರ ಡಿಸೆಂಬರ್ 11ರಂದು ರಾಜ್ಯದ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಈ ಮಸೂದೆಯನ್ನು ಮಂಡಿಸಿದ್ದರು. ಇದು ಅನುಮೋದನೆಗೊಂಡು ಮಾರ್ಚ್‌ 20ರಂದು ರಾಜ್ಯಪಾಲರ ಅಂಕಿತಕ್ಕೂ ಒಳಗಾಯಿತು.


ಕರ್ತವ್ಯದಲ್ಲಿ ಇರುವ ನ್ಯಾಯವಾದಿಗಳಿಗೆ ಈ ಕಾನೂನು ರಕ್ಷಣೆ ನೀಡಲಿದೆ. ಇನ್ನು ಮುಂದೆ ಯಾವುದೇ ಕರ್ತವ್ಯ ನಿರತ ವಕೀಲರ ಮೇಲೆ ಹಲ್ಲೆ, ದೌರ್ಜನ್ಯ ನಡೆದರೆ, ಕೃತ್ಯವೆಸಗಿದ ವ್ಯಕ್ತಿಯು ಆರು ತಿಂಗಳಿನಿಂದ ಮೂರು ವರ್ಷದ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಒಳಗಾಗುತ್ತಾರೆ. ಹಾಗೂ ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಬಹುದಾಗಿದೆ. ಅಥವಾ ಎರಡನ್ನೂ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.


ಬಂಧನದ ವೇಳೆ ವಕೀಲರಿಗೆ ರಕ್ಷಣೆ ಹೇಗೆ..?

ಕಾಗ್ನಿಜಿಬಲ್ (ಸಂಜ್ಞೇಯ) ಅಪರಾಧದ ಕುರಿತು ವಕೀಲರನ್ನು ಪೊಲೀಸರು ಬಂಧಿಸಿದಾಗ ಅಂತಹ ಬಂಧನದ ಬಗ್ಗೆ ಆರೋಪಿ ವಕೀಲರು ಸದಸ್ಯನಾಗಿರುವ ಸ್ಥಳೀಯ ವಕೀಲರ ಸಂಘದ ಅಧ್ಯಕ್ಷರು ಅಥವಾ ಕಾರ್ಯದರ್ಶಿಯವರಿಗೆ ಪೊಲೀಸರು ಮಾಹಿತಿ ನೀಡಬೇಕು.


ದಂಡನೀಯವಾದ ಪ್ರತಿಯೊಂದು ಅಪರಾಧವನ್ನು ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿಗೆ ಕಡಿಮೆ ಇಲ್ಲದ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.